ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಅಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನೀವೇ ತೀರ್ಮಾನ ಮಾಡಿ ಎಂದು ಜನರ ನಿರ್ಧಾರಕ್ಕೆ ಬಿಟ್ಟಿದ್ದರು. ಇದೇ ಸೂತ್ರವನ್ನು ಕೇಜ್ರಿವಾಲ್ ಈಗ ಗುಜರಾತ್ನಲ್ಲೂ ಅನುಸರಿಸುತ್ತಿದ್ದಾರೆ.
ಪಂಜಾಬ್ನಲ್ಲಿ ಆಗ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜನತೆಗೆ ಮುಕ್ತ ಸಮೀಕ್ಷೆ ನಡೆಸಲಾಯಿತು. ಫೋನ್ ನಂಬರ್ ನೀಡಿ ತಮ್ಮ ನೆಚ್ಚಿನ ಅಭ್ಯರ್ಥಿ ಯಾರೆಂದು ಟೆಕ್ಸ್ಟ್ ಮೆಸೇಜ್ ಅಥವಾ ವಾಟ್ಸಾಪ್ ಸಂದೇಶದ ಮೂಲಕ ತಿಳಿಸುವಂತೆ ಕೇಳಲಾಗಿತ್ತು. ಅದರಂತೆ, ಹೆಚ್ಚಿನ ಜನ ಅಂದಿನ ಸಂಸದ ಭಗವಂತ್ ಮಾನ್ ಪರವಾಗಿ ಸಂದೇಶ ಕಳುಹಿಸಿದ್ದರು. ಇದರೊಂದಿಗೆ ಎಎಪಿ ಅಭ್ಯರ್ಥಿಯನ್ನು ಚುನಾವಣೆಗೂ ಮುನ್ನವೇ ಅಂತಿಮಗೊಳಿಸಲಾಗಿತ್ತು. ಇದೇ ಸೂತ್ರವನ್ನು ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ಜಾರಿಗೆ ತರಲು ಕೇಜ್ರಿವಾಲ್ ಆಶಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಜನರು ನಿರ್ಧರಿಸಬೇಕು ಎಂದು ಕೇಜ್ರಿವಾಲ್ ಕರೆ ನೀಡಿದರು. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಶನಿವಾರ ರಾಜ್ಯದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್, ಗುಜರಾತ್ ಆಪ್ ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುಜರಾತಿನ ಜನರೇ ನಿರ್ಧರಿಸಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ನಾವೊಂದು ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನೀಡುತ್ತಿದ್ದೇವೆ ನೀವು ಇಷ್ಟಪಡುವ ಅಭ್ಯರ್ಥಿಯ ಹೆಸರನ್ನು ಮೇಲ್, ಸಾಮಾನ್ಯ ಸಂದೇಶ ಅಥವಾ WhatsApp ಸಂದೇಶದ ಮೂಲಕ ನಮಗೆ ಕಳುಹಿಸಬಹುದು ಎಂದರು.
ಜನರು ತಮ್ಮ ಅಭಿಪ್ರಾಯಗಳನ್ನು 6357000360 ಸಂಖ್ಯೆಗೆ ಕಳುಹಿಸಲು ಮತ್ತು aapnocm@gmail.com ಗೆ ಇಮೇಲ್ ಮಾಡುವಂತೆ ಮನವಿ ಮಾಡಿದರು.
