ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನ್ ಸ್ಟುಡಿಯೋದಲ್ಲಿ ಸ್ಥಾಪಿತವಾಗಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದು ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಆಕ್ರೋಶ ಉಂಟುಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಭಿಮಾನಿಗಳು ಜಾಗದ ಮಾಲೀಕ ಬಾಲಣ್ಣ ಅವರ ಕುಟುಂಬ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಧಿ ತೆರವು ವಿಷಯದಲ್ಲಿ ಪ್ರಮುಖ ಸ್ಟಾರ್ ನಟರು ಬಹಿರಂಗವಾಗಿ ಪ್ರತಿಕ್ರಿಯೆ ನೀಡದಿದ್ದರೆ, ನಟ ಧ್ರುವ ಸರ್ಜಾ ಮಾತ್ರ ಸಾಮಾಜಿಕ ಜಾಲತಾಣದಲ್ಲಿ “ಒಬ್ಬ ಸಾಧಕನಿಗೆ ಇಂಥ ಅವಮಾನ ಸರಿಯಲ್ಲ” ಎಂದು ಅಭಿಮಾನಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಅವರು “ವಿಷ್ಣು ಅಪ್ಪಾಜಿ ಅಜರಾಮರ, ಅವರ ಹೃದಯದ ಗುಡಿಯೇ ಸಾಕು, ಆದರೆ ಈ ಘಟನೆ ಮನಸ್ಸಿಗೆ ನೋವು ತಂದಿದೆ. ಅಭಿಮಾನಿಗಳ ಜೊತೆ ನಾನಿದ್ದೇನೆ” ಎಂದು ಹೇಳಿದ್ದಾರೆ.
ಅಭಿಮಾನಿಗಳು ಧ್ರುವ ಸರ್ಜಾ ಧ್ವನಿ ಎತ್ತಿದಕ್ಕಾಗಿ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದು, “ನ್ಯಾಯ ಎಲ್ಲಿದೆ?” ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು “ರಾತ್ರೋರಾತ್ರಿ ತೆರವು ಮಾಡಿದವರಿಗೆ ದೇವರ ನ್ಯಾಯ ತಪ್ಪದು” ಎಂದು ಪ್ರತಿಕ್ರಿಯಿಸಿದ್ದಾರೆ.
ವಿಷ್ಣುವರ್ಧನ್ ಅವರ ಅಧಿಕೃತ ಸ್ಮಾರಕ ಮೈಸೂರಿನಲ್ಲಿ ಇರುವುದಾದರೂ, ಅಭಿಮಾನಿಗಳು ಅವರ ಸಮಾಧಿ ಸ್ಥಾಪಿತವಾಗಿದ್ದ ಅಭಿಮಾನ್ ಸ್ಟುಡಿಯೋ ಸ್ಥಳವನ್ನು ಪುಣ್ಯಭೂಮಿಯಾಗಿ ಉಳಿಸಲು ಮನವಿ ಮಾಡಿದ್ದರು. ಆದರೆ, ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಉದ್ದೇಶದಿಂದ ಸಮಾಧಿ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.