ಹೊಸದಿಗಂತ ವರದಿ ಚಿತ್ರದುರ್ಗ:
2024ರ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಶ್ರೀ ಬಸವಮೂರ್ತಿ
ಮದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಆಡಳಿತ ಮಂಡಳಿ ಈ ಆಹ್ವಾನ ನೀಡಿದ್ದು, ಭಾರತಿಯರ ಬಹು ವರ್ಷಗಳ ನಿರೀಕ್ಷೆ ಸಾಕಾರಗೊಂಡಿರುವ ಈ ಅಭೂತಪೂರ್ವ ಐತಿಹಾಸಿಕ ಕಾರ್ಯಕ್ರಮದಲ್ಲಿ ತಮ್ಮ ದಿವ್ಯ ಉಪಸ್ಥಿತಿ ಅವಶ್ಯಕವಾಗಿದೆ ಎಂದು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಶ್ರೀಗಳಿಗೆ ಕಳುಸಿರುವ ಆಹ್ವಾನ ಪತ್ರದಲ್ಲಿ ತಿಳಿಸಿದ್ದಾರೆ.
ಇದೊಂದು ಅವಿಸ್ಮರಣೀಯ ಸಮಾರಂಭವಾಗಿದ್ದು, ಜಗತ್ತಿನ ಅನೇಕ ದೇಶಗಳಿಂದ ಪ್ರಮುಖರು ಆಗಮಿಸುತ್ತಿದ್ದಾರೆ. ಆದರ್ಶ ಪುರುಷ ಶ್ರೀರಾಮ ಜನಿಸಿದ ಈ ಪವಿತ್ರ ಸ್ಥಳದಲ್ಲಿ ಪವಿತ್ರ ಮಂದಿರ ನಿರ್ಮಾಣಗೊಂಡಿದ್ದು, ಈ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಶ್ರೀಗಳನ್ನು ಕೋರಲಾಗಿದೆ.
ರಾಮಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀಡಿರುವ ಆಹ್ವಾನದ ಕುರಿತು ಪ್ರತಿಕ್ರಿಯಿಸಿರುವ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ರಾಮ ಮಂದಿರ ನಿರ್ಮಾಣದ ಶೀಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಇದೀಗ ಮಂದಿರದ ಲೋಕಾರ್ಪಣೆ ಸಮಾರಂಭಕ್ಕೆ ಅಧಿಕೃತ ಆಹ್ವಾನ ಬಂದಿದೆ ಎಂದು ತಿಳಿಸಿದ್ದಾರೆ.