ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಅಂಬಾರಿಯನ್ನು ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ ಆನೆಯು ಕಾದಾಟದಲ್ಲಿ ಸಾವನ್ನಪ್ಪಿದ್ದು, ಹಾಸನದ ಕಾಡಿನಲ್ಲಿ ಸಮಾಧಿ ಮಾಡಲಾಗಿದೆ.
ಇಂದು ಅರ್ಜುನನ ಸಮಾಧಿಗೆ ಮೈಸೂರಿನ ರಾಜಮನೆತನದ ಯದುವೀರ್ ಒಡೆಯರ್ ದಂಪತಿ ಪೂಜೆ ಸಲ್ಲಿಸಿದರು.
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಜನಮನ್ನಣೆ ಗಳಿಸಿತ್ತು. ಆದರೆ, ಸೋಮವಾರ ಕಾಡಾನೆ ಕಾರ್ಯಾಚರಣೆ ವೇಳೆ ಮದವೇರಿದ ಒಂಟಿ ಸಲಗದೊಂದಿಗೆ ಕಾದಾಟದ ಸಮಯದಲ್ಲಿ ಹೊಟ್ಟೆಗೆ ಪೆಟ್ಟು ಬಿದ್ದು ವೀರಮರಣ ಹೊಂದಿತ್ತು. ಆದರೆ, ಆನೆಯ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ವೇಳೆ ಮೈಸೂರು ರಾಜಮನೆತನದ ಸದಸ್ಯರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರಮನೆಯಿಂದ ಪುರೋಹಿತರನ್ನು ಕಳಿಸಿ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಗಿತ್ತು.
ಹೀಗಾಗಿ ಹಾಸನ ಜಿಲ್ಲೆ ಸಕಲೇಶಪುರದ ದಬ್ಬಳ್ಳಿ ವ್ಯಾಪ್ತಿಯ ಅರಣ್ಯದಲ್ಲಿರುವ ಅರ್ಜುನ ಸಮಾಧಿಗೆ 3ನೇ ದಿನಕ್ಕೆ ಆಗಮಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರಿ ದಂಪತಿ ಸಮೇತರಾಗಿ ಅರ್ಜುನ ಆನೆಯ ಸಮಾಧಿಗೆ ಪೂಜೆ ನೆರವೇರಿಸಿದರು.